- 1 ಪಸ್ಕದ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವದಕ್ಕೆ ಇನ್ನೂ ಎರಡು ದಿವಸ ಗಳಿದ್ದಾಗ ಪ್ರಧಾನಯಾಜಕರೂ ಶಾಸ್ತ್ರಿಗಳೂ ಉಪಾಯ ದಿಂದ ಆತನನ್ನು ಹೇಗೆ ಹಿಡಿದು ಕೊಲ್ಲಬೇಕೆಂದು ಹವಣಿಸುತ್ತಿದ್ದರು.
- 2 ಆದರೆ ಅವರು--ಜನರು ದಂಗೆ ಏಳದಂತೆ ಹಬ್ಬದಲ್ಲಿ ಬೇಡ ಎಂದು ಅಂದುಕೊಂಡರು.
- 3 ಬೇಥಾನ್ಯದಲ್ಲಿದ್ದ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಆತನು ಊಟಕ್ಕೆ ಕೂತಿದ್ದಾಗ ಒಬ್ಬ ಸ್ತ್ರೀಯು ಅತಿ ಶ್ರೇಷ್ಠವಾದ ಸುಗಂಧ ತೈಲದ ಭರಣಿ ಯನ್ನು ತೆಗೆದುಕೊಂಡು ಬಂದು ಅದನ್ನು ಒಡೆದು ಆತನ ತಲೆಯ ಮೇಲೆ ಹೊಯಿದಳು.
- 4 ಆದರೆ ಅಲ್ಲಿದ್ದ ಕೆಲವರು ತಮ್ಮೊಳಗೆ ಕೋಪಗೊಂಡು--ಈ ತೈಲವನ್ನು ನಷ್ಟ ಮಾಡಿದ್ದೇಕೆ?
- 5 ಇದನ್ನು ಮುನ್ನೂರು (ಪೆನ್ಸ್) ಹಣಕ್ಕಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡ ಬಹುದಾಗಿತ್ತಲ್ಲಾ ಎಂದು ಅಂದುಕೊಂಡು ಆಕೆಗೆ ವಿರೋಧವಾಗಿ ಗುಣುಗುಟ್ಟಿದರು.
- 6 ಆದರೆ ಯೇಸು --ಈಕೆಯನ್ನು ಬಿಟ್ಟುಬಿಡಿರಿ; ಈಕೆಗೆ ನೀವು ಯಾಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೇ ಕಾರ್ಯವನ್ನು ಮಾಡಿದ್ದಾಳೆ.
- 7 ಯಾಕಂದರೆ ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ; ನಿಮಗೆ ಮನಸ್ಸಿದ್ದರೆ ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು; ಆದರೆ ನಾನು ಯಾವಾ ಗಲೂ ನಿಮ್ಮ ಬಳಿಯಲ್ಲಿ ಇರುವದಿಲ್ಲ.
- 8 ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ; ನನ್ನ ಶರೀರವನ್ನು ಹೂಣಿಡುವದಕ್ಕೆ ಅದನ್ನು ಅಭಿಷೇಕಿಸುವದಕ್ಕಾಗಿ ಈಕೆಯು ಮುಂದಾಗಿ ಮಾಡಿದ್ದಾಳೆ.
- 9 ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ಈ ಸುವಾರ್ತೆಯು ಸರ್ವ ಲೋಕದಲ್ಲಿ ಎಲ್ಲೆಲ್ಲಿ ಸಾರಲ್ಪಡುವದೋ ಅಲ್ಲೆಲ್ಲಾ ಈಕೆಯು ಮಾಡಿದ್ದು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳುವರು ಅಂದನು.
- 10 ಆಗ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದ ಇಸ್ಕರಿಯೋತನು ಯೇಸುವನ್ನು ಪ್ರಧಾನ ಯಾಜಕರಿಗೆ ಹಿಡುಕೊಡುವಂತೆ ಅವರ ಬಳಿಗೆ ಹೋದನು.
- 11 ಅವರು ಅದನ್ನು ಕೇಳಿ ಸಂತೋಷಪಟ್ಟು ಅವನಿಗೆ ಹಣ ಕೊಡುತ್ತೇವೆಂದು ಮಾತುಕೊಟ್ಟರು. ಅವನು ಆತನನ್ನು ಅನುಕೂಲವಾಗಿ ಹಿಡುಕೊಡುವದು ಹೇಗೆಂದು ಹುಡುಕುತ್ತಿದ್ದನು.
- 12 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸ ಪಸ್ಕದ ಕುರಿಯನ್ನು ಅವರು ಕೊಯ್ದಾಗ ಆತನ ಶಿಷ್ಯರು ಆತನಿಗೆ--ನೀನು ಪಸ್ಕದ ಊಟಮಾಡು ವಂತೆ ನಾವು ಎಲ್ಲಿಗೆ ಹೋಗಿ ಸಿದ್ಧಮಾಡಬೇಕನ್ನುತ್ತೀ ಎಂದು ಕೇಳಿದರು.
- 13 ಆಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--ನೀವು ಪಟ್ಟಣದೊಳಕ್ಕೆ ಹೋಗಿರಿ; ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನನ್ನು ಹಿಂಬಾಲಿಸಿರಿ.
- 14 ಅವನು ಯಾವ ಮನೆ ಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನ ನಿಗೆ--ನಾನು ನನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ ಎಂದು ಬೋಧ ಕನು ಕೇಳುತ್ತಾನೆ ಎಂದು ಹೇಳಿರಿ.
- 15 ಅವನು ಸಜ್ಜು ಗೊಳಿಸಿ ಸಿದ್ಧಮಾಡಿದ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ನಮಗೆ ಸಿದ್ಧಮಾಡಿರಿ ಅಂದನು.
- 16 ಆಗ ಆತನ ಶಿಷ್ಯರು ಹೊರಟುಹೋಗಿ ಪಟ್ಟಣದೊಳಕ್ಕೆ ಬಂದು ಆತನು ತಮಗೆ ಹೇಳಿದಂತೆ ಕಂಡುಕೊಂಡು ಪಸ್ಕವನ್ನು ಸಿದ್ಧಮಾಡಿದರು.
- 17 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದನು.
- 18 ಅವರು ಕೂತುಕೊಂಡು ಊಟಮಾಡುತ್ತಿದ್ದಾಗ ಯೇಸು ಅವರಿಗೆ--ನನ್ನೊಂದಿಗೆ ಊಟ ಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- 19 ಆಗ ಅವರು ದುಃಖಿಸ ಲಾರಂಭಿಸಿ ಒಬ್ಬೊಬ್ಬರಾಗಿ ಆತನಿಗೆ--ಅದು ನಾನೋ? ಮತ್ತು ಇನ್ನೊಬ್ಬನು--ಅದು ನಾನೋ? ಎಂದು ಆತನನ್ನು ಕೇಳಿದರು.
- 20 ಅದಕ್ಕಾತನು ಪ್ರತ್ಯುತ್ತರವಾಗಿ ಅವರಿಗೆ--ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು, ಅಂದರೆ ನನ್ನ ಸಂಗಡ ಪಾತ್ರೆಯಲ್ಲಿ ಅದ್ದುವವನೇ.
- 21 ತನ್ನ ವಿಷಯವಾಗಿ ಬರೆದಿರುವ ಪ್ರಕಾರ ಮನುಷ್ಯ ಕುಮಾರನು ನಿಜವಾಗಿಯೂ ಹೋಗುತ್ತಾನೆ; ಆದರೆ ಯಾವನಿಂದ ಮನುಷ್ಯಕುಮಾರನು ಹಿಡುಕೊಡಲ್ಪಡು ತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಎಂದು ಹೇಳಿದನು.
- 22 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ ಮುರಿದು ಅವರಿಗೆ ಕೊಟ್ಟು--ತಕ್ಕೊಳ್ಳಿರಿ, ತಿನ್ನಿರಿ; ಇದು ನನ್ನ ದೇಹ ಅಂದನು.
- 23 ತರುವಾಯ ಆತನು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು.
- 24 ಆಗ ಆತನು ಅವರಿಗೆ--ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ಹೊಸಒಡಂಬಡಿಕೆಯ ನನ್ನ ರಕ್ತ.
- 25 ಇದಲ್ಲದೆ ನಾನು ದೇವರ ರಾಜ್ಯದಲ್ಲಿ ಇದನ್ನು ಹೊಸದಾಗಿ ಕುಡಿಯುವ ಆ ದಿನದ ವರೆಗೆ ಇನ್ನು ಮೇಲೆ ದ್ರಾಕ್ಷಾರಸವನ್ನು ನಾನು ಕುಡಿಯುವದೇ ಇಲ್ಲವೆಂದು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
- 26 ಬಳಿಕ ಅವರು ಒಂದು ಸಂಗೀತ ಹಾಡಿ ಎಣ್ಣೇ ಮರಗಳ ಗುಡ್ಡಕ್ಕೆ ಹೊರಟುಹೋದರು.
- 27 ಆಗ ಯೇಸು ಅವರಿಗೆ--ಈ ರಾತ್ರಿ ನೀವೆಲ್ಲರೂ ನನ್ನ ದೆಸೆಯಿಂದ ಅಭ್ಯಂತರಪಡುವಿರಿ; ಯಾಕಂದರೆನಾನು ಕುರುಬನನ್ನು ಹೊಡೆಯುವೆನು, ಕುರಿಗಳು ಚದರಿಸಲ್ಪ ಡುವವು ಎಂದು ಬರೆದದೆ.
- 28 ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗು ವೆನು ಎಂದು ಹೇಳಿದನು.
- 29 ಆದರೆ ಪೇತ್ರನು ಆತ ನಿಗೆ ಎಲ್ಲರೂ ಅಭ್ಯಂತರಪಟ್ಟಾಗ್ಯೂ ನಾನು ಅಭ್ಯಂತರ ಪಡುವದಿಲ್ಲ ಎಂದು ಹೇಳಿದನು.
- 30 ಆದರೆ ಯೇಸು ಅವನಿಗೆ--ಈ ದಿವಸ ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ಅಲ್ಲಗಳೆಯುವಿ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ ಅಂದನು.
- 31 ಆದರೆ ಅವನು--ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅಲ್ಲಗಳೆಯುವದಿಲ್ಲ ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಅವರೆಲ್ಲರೂ ಹೇಳಿದರು.
- 32 ಆಗ ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದಾಗ ಆತನು ತನ್ನ ಶಿಷ್ಯರಿಗೆ--ನಾನು ಪ್ರಾರ್ಥನೆ ಮಾಡು ವಾಗ ನೀವು ಇಲ್ಲಿ ಕೂತುಕೊಂಡಿರ್ರಿ ಅಂದನು.
- 33 ಆತನು ಪೇತ್ರ ಯಾಕೋಬ ಯೋಹಾನರನ್ನು ತನ್ನೊಂದಿಗೆ ಕರಕೊಂಡು ಹೋಗಿ ಅತಿವಿಸ್ಮಯಗೊಂಡು ಬಹಳ ಮನಗುಂದಿದವನಾಗಿ--
- 34 ನನ್ನ ಪ್ರಾಣವು ಸಾಯುವಷ್ಟು ಅತ್ಯಧಿಕವಾದ ದುಃಖಕ್ಕೆ ಒಳಗಾಗಿದೆ; ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರ್ರಿ ಅಂದನು.
- 35 ಆತನು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿ ಹೋಗುವಂತೆ ಪ್ರಾರ್ಥಿಸಿದನು.
- 36 ಆತನು --ಅಪ್ಪಾ, ತಂದೆಯೇ, ಎಲ್ಲವುಗಳು ನಿನಗೆ ಸಾಧ್ಯವಾಗಿವೆ; ಈ ಪಾತ್ರೆಯನ್ನು ನನ್ನಿಂದ ತೆಗೆದುಬಿಡು; ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ ಎಂದು ಹೇಳಿದನು.
- 37 ತರುವಾಯ ಆತನು ಬಂದು ಅವರು ನಿದ್ರೆಮಾಡುವದನ್ನು ಕಂಡು ಪೇತ್ರನಿಗೆ--ಸೀಮೋನನೇ, ನೀನು ನಿದ್ರೆಮಾಡು ತ್ತೀಯಾ? ಒಂದು ಗಳಿಗೆಯಾದರೂ ಎಚ್ಚರವಾಗಿ ರಲಾರೆಯಾ?
- 38 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ನಿಜವಾಗಿಯೂ ಸಿದ್ಧವಾಗಿದೆ; ಆದರೆ ಶರೀರವು ಬಲಹೀನವಾಗಿದೆ ಎಂದು ಹೇಳಿದನು.
- 39 ಆತನು ತಿರಿಗಿ ಹೊರಟು ಹೋಗಿ ಅದೇ ಮಾತುಗಳನ್ನು ಹೇಳುತ್ತಾ ಪ್ರಾರ್ಥಿಸಿ ದನು.
- 40 ಆತನು ಹಿಂತಿರುಗಿದಾಗ ಅವರು ತಿರಿಗಿ ನಿದ್ರೆ ಮಾಡುವದನ್ನು ಕಂಡನು; (ಯಾಕಂದರೆ ಅವರ ಕಣ್ಣುಗಳು ಭಾರವಾಗಿದ್ದವು;) ಆತನಿಗೆ ಅವರು ಏನು ಉತ್ತರ ಕೊಡಬೇಕೋ ತಿಳಿಯಲಿಲ್ಲ.
- 41 ಆತನು ಮೂರನೆಯ ಸಾರಿ ಬಂದು ಅವರಿಗೆ-- ಈಗ ನಿದ್ರೆ ಮಾಡಿ ನಿಮ್ಮ ವಿಶ್ರಾಂತಿಯನ್ನು ತೆಗೆದುಕೊಳ್ಳಿರಿ; ಇನ್ನು ಸಾಕು; ಗಳಿಗೆ ಬಂದಿದೆ; ಇಗೋ, ಮನುಷ್ಯ ಕುಮಾರನು ಪಾಪಿಗಳ ಕೈಗಳಿಗೆ ಹಿಡುಕೊಡಲ್ಪಡುತ್ತಾನೆ;
- 42 ಏಳಿರಿ, ನಾವು ಹೋಗೋಣ; ಇಗೋ ನನ್ನನ್ನು ಹಿಡುಕೊಡುವವನು ಸವಿಾಪದಲ್ಲಿದ್ದಾನೆ ಎಂದು ಹೇಳಿದನು.
- 43 ಆತನು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆ ರಡು ಮಂದಿಯಲ್ಲಿ ಒಬ್ಬನಾದ ಯೂದನು ಬಂದನು; ಪ್ರಧಾನ ಯಾಜಕರ ಶಾಸ್ತ್ರಿಗಳ ಮತ್ತು ಹಿರಿಯರ ಕಡೆ ಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಕತ್ತಿ ದೊಣ್ಣೆಗಳನ್ನು ಹಿಡಿದುಕೊಂಡು ಅವನ ಕೂಡ ಬಂದರು.
- 44 ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ--ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಆತನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡು ಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು.
- 45 ಅವನು ಬಂದ ಕೂಡಲೆ ನೇರವಾಗಿ ಆತನ ಕಡೆಗೆ ಹೋಗಿ-- ಗುರುವೇ, ಗುರುವೇ ಎಂದು ಹೇಳಿ ಆತನಿಗೆ ಮುದ್ದಿಟ್ಟನು.
- 46 ಆಗ ಅವರು ಆತನ ಮೇಲೆ ಕೈ ಹಾಕಿ ಆತನನ್ನು ಹಿಡಿದರು.
- 47 ಆದರೆ ಹತ್ತಿರ ನಿಂತಿದ್ದ ವರಲ್ಲಿ ಒಬ್ಬನು ಕತ್ತಿಯನ್ನು ಹಿರಿದು ಪ್ರಧಾನ ಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿ ದನು.
- 48 ಯೇಸು ಅವರಿಗೆ-- ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ತಕ್ಕೊಂಡು ಕಳ್ಳನಿಗೆ ವಿರೋಧವಾಗಿ ಬರುವಂತೆ ನನ್ನನ್ನು ಹಿಡಿಯುವದಕ್ಕಾಗಿ ಬಂದಿರಾ?
- 49 ನಾನು ಪ್ರತಿ ದಿನವೂ ದೇವಾಲಯದಲ್ಲಿ ಬೋಧಿ ಸುತ್ತಾ ನಿಮ್ಮ ಸಂಗಡ ಇದ್ದೆನು; ಆಗ ನೀವು ನನ್ನನು ಹಿಡಿಯಲಿಲ್ಲ; ಆದರೆ ಬರಹಗಳು ನೆರವೇರಲೇಬೇಕು ಅಂದನು.
- 50 ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
- 51 ಅಲ್ಲಿ ಒಬ್ಬಾನೊಬ್ಬ ಯೌವನಸ್ಥನು ಬರೀ ಮೈಮೇಲೆ ನಾರು ಬಟ್ಟೆಯನ್ನು ಹಾಕಿಕೊಂಡವನಾಗಿ ಆತನನ್ನು ಹಿಂಬಾಲಿಸುತ್ತಿರಲು ಯೌವನಸ್ಥರು ಅವನನ್ನು ಹಿಡಿದರು.
- 52 ಆಗ ಅವನು ಆ ನಾರುಮಡಿಯನ್ನು ಬಿಟ್ಟು ಬರೀ ಮೈಯಲ್ಲಿ ಓಡಿಹೋದನು.
- 53 ಇದಾದ ಮೇಲೆ ಅವರು ಯೇಸುವನ್ನು ಮಹಾ ಯಾಜಕನ ಬಳಿಗೆ ತೆಗೆದುಕೊಂಡು ಹೋದರು; ಆತನ ಸಂಗಡ ಪ್ರಧಾನ ಯಾಜಕರೆಲ್ಲರೂ ಹಿರಿಯರೂ ಶಾಸ್ತ್ರಿಗಳೂ ಅವನ ಬಳಿಗೆ ಕೂಡಿ ಬಂದರು.
- 54 ಆದರೆ ಪೇತ್ರನು ಮಹಾಯಾಜಕನ ಭವನದವರೆಗೂ ದೂರ ದಿಂದ ಆತನನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳು ತ್ತಿದ್ದನು.
- 55 ಪ್ರಧಾನಯಾಜಕರೂ ನ್ಯಾಯಸಭೆಯವ ರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನಿಗೆ ವಿರೋಧವಾಗಿ ಸಾಕ್ಷಿಯನ್ನು ಹುಡುಕಿ ಏನೂ ಕಂಡು ಕೊಳ್ಳಲಿಲ್ಲ.
- 56 ಅನೇಕರು ಆತನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿಯು ಒಂದ ಕ್ಕೊಂದು ಒಪ್ಪಲಿಲ್ಲ.
- 57 ತರುವಾಯ ಕೆಲವರು ಎದ್ದು ಆತನಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತಾ--
- 58 ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ ಅಂದರು.
- 59 ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ.
- 60 ಆಗ ಮಹಾಯಾಜಕನು ಎದ್ದು ನಡುವೆ ನಿಂತು ಯೇಸುವಿಗೆ--ನೀನು ಏನೂ ಉತ್ತರಕೊಡುವದಿ ಲ್ಲವೋ? ಇವರು ನಿನಗೆ ವಿರೋಧವಾಗಿ ಹೇಳುವ ಈ ಸಾಕ್ಷಿ ಏನು ಎಂದು ಕೇಳಿದನು.
- 61 ಆದರೆ ಆತನು ಏನೂ ಉತ್ತರ ಕೊಡದೆ ಮೌನವಾಗಿದ್ದನು; ತಿರಿಗಿ ಮಹಾಯಾಜಕನು--ನೀನು ಆ ಕ್ರಿಸ್ತನೋ? ಸ್ತುತಿಹೊಂದುವಾತನ ಕುಮಾರನೋ ಎಂದು ಆತನನ್ನು ಕೇಳಿದನು.
- 62 ಅದಕ್ಕೆ ಯೇಸು--ನಾನೇ, ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಪಾರ್ಶ್ವದಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳಲ್ಲಿ ಬರುವದನ್ನೂ ನೀವು ನೋಡುವಿರಿ ಅಂದನು.
- 63 ಅದಕ್ಕೆ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು--ನಮಗೆ ಇನ್ನು ಹೆಚ್ಚು ಸಾಕ್ಷಿಗಳ ಅವಶ್ಯಕತೆ ಏನಿದೆ?
- 64 ನೀವು ಈ ದೇವದೂಷಣೆಯನ್ನು ಕೇಳಿದ್ದೀರಲ್ಲಾ; ನಿಮಗೆ ಹೇಗೆ ತೋರುತ್ತದೆ ಎಂದು ಕೇಳಲು ಅವರೆಲ್ಲರೂ ಅವನು ಮರಣದಂಡನೆ ಹೊಂದತಕ್ಕವನು ಎಂದು ತೀರ್ಪುಮಾಡಿದರು
- 65 ತರು ವಾಯ ಕೆಲವರು ಆತನ ಮೇಲೆ ಉಗುಳಿ ಆತನ ಮುಖವನ್ನು ಮುಚ್ಚಿ ಆತನನ್ನು ಗುದ್ದುವದಕ್ಕೆ ಆರಂಭಿಸಿ ಆತನಿಗೆ--ಪ್ರವಾದನೆ ಹೇಳು ಅಂದರು. ಆಳು ಗಳು ಆತನನ್ನು ಹೊಡೆದರು.
- 66 ಇದಲ್ಲದೆ ಪೇತ್ರನು ಭವನದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು.
- 67 ಪೇತ್ರನು ಚಳಿಕಾಯಿಸಿಕೊಳ್ಳುತ್ತಿರು ವದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ--ನೀನು ಸಹ ಆ ನಜರೇತಿನ ಯೇಸುವಿ ನೊಂದಿಗೆ ಇದ್ದವನು ಅಂದಳು.
- 68 ಆದರೆ ಅವನು ಅಲ್ಲಗಳೆದು--ನನಗೆ ಗೊತ್ತಿಲ್ಲ, ನೀನು ಏನು ಹೇಳುತ್ತೀಯೋ ನನಗೆ ತಿಳಿಯುವದಿಲ್ಲ ಎಂದು ಹೇಳಿ ಅಲ್ಲಗಳೆದು ಹೊರಗೆ ದ್ವಾರಾಂಗಳದೊಳಗೆ ಹೋದನು; ಆಗ ಹುಂಜ ಕೂಗಿತು.
- 69 ಆ ದಾಸಿಯು ಅವನನ್ನು ತಿರಿಗಿ ನೋಡಿ ಪಕ್ಕದಲ್ಲಿ ನಿಂತಿದ್ದವರಿಗೆ--ಇವನು ಅವರಲ್ಲಿ ಒಬ್ಬನು ಎಂದು ಹೇಳಲಾರಂಭಿಸಿದಳು.
- 70 ಆಗ ಅವನು ಮತ್ತೆ ಅಲ್ಲಗಳೆದನು. ತುಸು ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರಿಗಿ ಪೇತ್ರನಿಗೆ--ನಿಶ್ಚಯವಾಗಿಯೂ ನೀನು ಅವರಲ್ಲಿ ಒಬ್ಬನು; ಯಾಕಂದರೆ ನೀನು ಗಲಿಲಾಯದವನು ಮತ್ತು ನಿನ್ನ ಭಾಷೆ ಅದಕ್ಕೆ ಒಪ್ಪುತ್ತದೆ ಅಂದರು.
- 71 ಆದರೆ ಅವನು ಶಪಿಸಿ ಕೊಳ್ಳುವದಕ್ಕೂ ಆಣೆಯಿಟ್ಟುಕೊಳ್ಳುವದಕ್ಕೂ ಆರಂ ಭಿಸಿ--ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ ಅಂದನು.
- 72 ಆಗ ಎರಡನೇ ಸಾರಿ ಹುಂಜ ಕೂಗಿತು. ಹೀಗೆ--ಎರಡು ಸಾರಿ ಹುಂಜ ಕೂಗುವದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ಅದನ್ನು ಯೋಚಿಸಿ ಅತ್ತನು.
Mark 14
- Details
- Parent Category: New Testament
- Category: Mark
ಮಾರ್ಕನು ಅಧ್ಯಾಯ 14